ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಶನಿವಾರ, ಅಕ್ಟೋಬರ್ 7, 2017

ಸಜ್ಜನಿಕೆ ಮತ್ತು ಕ್ಷಾತ್ರತೆ


     ಕಾಶ್ಮೀರ ಕಣಿವೆಯಲ್ಲಿ ಸೈನ್ಯದ ಸಿಬ್ಬಂದಿಯ ಮೇಲೆ ಕಲ್ಲು ತೂರಾಟ ನಡೆಸುತ್ತಿದ್ದವರ ಪೈಕಿ ಒಬ್ಬನನ್ನು ಹಿಡಿದು ಜೀಪಿನ ಮುಂಭಾಗದಲ್ಲಿ ಕಟ್ಟಿಹಾಕಿ ಗುಂಪಿನಿಂದ ಆಗುತ್ತಿದ್ದ ಮಾರಣಾಂತಿಕ ಹಲ್ಲೆಯಿಂದ ಸಿಬ್ಬಂದಿ ತಪ್ಪಿಸಿಕೊಂಡ ಬಗ್ಗೆ ವ್ಯಾಪಕ ಚರ್ಚೆಯಾಗಿತ್ತು. ಸುಮಾರು 1200ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿದ್ದ ಹಲ್ಲೆಕೋರರ ಗುಂಪಿನಿಂದ ಸಂಭವಿಸಬಹುದಾಗಿದ್ದ 12 ಸೇನಾ ಸಿಬ್ಬಂದಿಯ ಜೀವಹಾನಿ ತಪ್ಪಿಸುವ ಸಲುವಾಗಿ ಸಾಂದರ್ಭಿಕವಾಗಿ ತೆಗೆದುಕೊಂಡ ಆ ನಿರ್ಧಾರ ಸರಿಯೆಂಬುದು ಬಹುತೇಕರ ಅಭಿಪ್ರಾಯವಾಗಿದೆ. ಮಾನವ ಹಕ್ಕಿನ ಉಲ್ಲಂಘನೆ ಎಂದು ವಾದಿಸಿದವರೂ ಇದ್ದಾರೆ. ಸಾಮಾಜಿಕ ಅಂತರ್ಜಾಲ ತಾಣಗಳು, ಫೇಸ್ ಬುಕ್, ಟ್ಡಿಟರ್‌ಗಳಲ್ಲಿ ಸಹ ಚರ್ಚೆ ಗಂಭೀರ ಸ್ವರೂಪದಲ್ಲಿ ನಡೆದಿದೆ, ವೈಯಕ್ತಿಕ ಕೆಸರೆರಚಾಟಗಳೂ ನಡೆದಿವೆ. ಪಾಕಿಸ್ತಾನದ ನೇರ ಹಸ್ತಕ್ಷೇಪವೂ ಸಮಸ್ಯೆ ಬಿಗಡಾಯಿಸಲು ಕಾರಣವೆಂಬುದು ಸುಸ್ಪಷ್ಟ. ಸೇನೆಯ ಸ್ಥೈರ್ಯ ಕುಸಿಯುವಂತೆ ಮಾಡುವ ಕೆಲವು ಮಾಧ್ಯಮಗಳ ಜನರು ಹಾಗೂ ಒಂದು ಕಾಲದಲ್ಲಿ ಗಣ್ಯರೆನ್ನಿಸಿಕೊಂಡಿದ್ದವರ ಹೇಳಿಕೆಗಳು, ಪ್ರಯತ್ನಗಳು ಮಾತ್ರ ದೇಶದ ಹಿತದ ದೃಷ್ಟಿಯಿಂದ ಸಮರ್ಥನೀಯವೆನ್ನಿಸುವುದಿಲ್ಲ. ಟ್ವಿಟರಿನಲ್ಲಿ ಬರುವ ಹೇಳಿಕೆಗಳೂ ಒಂದಕ್ಕೊಂದು ಟಾಂಗ್ ಕೊಡುವ ರೀತಿಯಲ್ಲಿವೆ. ಉದಾಹರಿಸಬೇಕೆಂದರೆ, ಒಬ್ಬರು ಬರೆಯುತ್ತಾರೆ: ಕಣ್ಣು ಮುಚ್ಚಿಕೊಂಡು ಕಲ್ಪಿಸಿಕೊಳ್ಳಿ. ನಿಮ್ಮ ಕುಟುಂಬದ ಒಬ್ಬ ಸದಸ್ಯರನ್ನೇ ಸೈನ್ಯದ ಜೀಪಿನ ಮುಂದೆ ಕಟ್ಟಿ ಅಶಾಂತ ಸ್ಥಿತಿಯಿರುವ ಎಡೆಯಲ್ಲಿ ಕರೆದೊಯ್ಯುತ್ತಿದ್ದಾರೆಂದು ಕಲ್ಪಿಸಿಕೊಳ್ಳಿ. ಈಗ ಕಣ್ಣು ಬಿಡಿ. ನಿಮಗೆ ಏನು ಅನ್ನಿಸುತ್ತದೆ? ನಿಜವಾಗಿ ಹೇಳಿ. ಇದಕ್ಕೆ ಪ್ರತಿಕ್ರಿಯೆಯೂ ಬರುತ್ತದೆ: ನಿಮ್ಮ ತಂದೆ ಜೀಪು ಚಾಲನೆ ಮಾಡುತ್ತಿದ್ದಾರೆ. ನಿಮ್ಮ ತಾಯಿ ಅವರ ಪಕ್ಕದ ಸೀಟಿನಲ್ಲಿ ಕುಳಿತಿದ್ದಾರೆ. ಸಾವಿರಾರು ಜನರು ಗುಂಪು ಕೂಡಿ ಜೀಪಿನ ಮೇಲೆ ಕಲ್ಲುಗಳನ್ನು ತೂರುತ್ತಿದ್ದಾರೆ ಎಂಬ ಸ್ಥಿತಿಯನ್ನು ಕಲ್ಪಿಸಿಕೊಳ್ಳಿ. ಈಗ ನಿಮಗೆ ಏನು ಅನ್ನಿಸುತ್ತದೆ? ನಿಜವಾಗಿ ಹೇಳಿ. ಹಿಂದಿನ ದಶಕಗಳಲ್ಲಿ ಸಮಸ್ಯೆಯ ಇತ್ಯರ್ಥಕ್ಕೆ ರಾಜಕೀಯ ಇಚ್ಛಾಶಕ್ತಿಯ ಕೊರತೆಯ ಜೊತೆಗೆ ದೇಶಹಿತಕ್ಕಿಂತ ರಾಜಕೀಯ ಲಾಭದ ಕಡೆಗೆ ಹೆಚ್ಚಿನ ಗಮನ ಕೊಟ್ಟದ್ದೇ ಸಮಸ್ಯೆ ಉಲ್ಬಣಗೊಂಡು, ನುಸುಳುಕೋರರದೇ ಪ್ರಾಬಲ್ಯವಾಗಲು ಕಾರಣವಾಗಿದೆಯೆಂದರೆ ಅದರಲ್ಲಿ ಸುಳ್ಳಿಲ್ಲ. ಇಂತಹುದೇ ಸಮಸ್ಯೆ ಪಶ್ಚಿಮ ಬಂಗಾಳದಲ್ಲೂ ಇದೆ. ಪಶ್ಚಿಮ ಬಂಗಾಳವನ್ನೂ ಬಾಂಗ್ಲಾದೇಶದೊಂದಿಗೆ ಸೇರಿಸಿಕೊಳ್ಳುವ ಹುನ್ನಾರವೂ ಬಾಂಗ್ಲಾದೇಶೀಯರ ಅಕ್ರಮ ನುಸುಳುವಿಕೆಯ ಹಿನ್ನೆಲೆಯಲ್ಲಿದೆ. ಈಗ ದಿಟ್ಟ ಮತ್ತು ಧೃಢ ಕ್ರಮಗಳನ್ನು ಕೈಗೊಳ್ಳದಿದ್ದರೆ ಮುಂದೆ ಕೇರಳದಲ್ಲೂ ಈ ಸ್ಥಿತಿ ಬರಲಿದೆ. ಕ್ಯಾನ್ಸರ್ ರೋಗದಂತೆ ದೇಶದ ವಿವಿದೆಡೆಗಳಲ್ಲಿ ಸಮಸ್ಯೆ ಹರಡಿದರೂ ಆಶ್ಚರ್ಯವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ದೇಶದ ಸಮಗ್ರತೆ ಮತ್ತು ಹಿತಕ್ಕೆ ಧಕ್ಕೆ ಬರುವಂತಹ ನಡವಳಿಕೆಗಳನ್ನು ಪ್ರದರ್ಶಿಸುವವರ ವಿರುದ್ಧವೂ ಕಠಿಣ ಕ್ರಮ ಅನುಸರಿಸುವುದು ಕಾಲದ ಅಗತ್ಯವಾಗಿದೆ.
     ಭಾರತ ಶಾಂತಿಪ್ರಿಯ ರಾಷ್ಟ್ರ. ತಾನಾಗಿಯೇ ಅದು ನೆರೆ ರಾಷ್ಟ್ರಗಳ ವಿರುದ್ಧ ಯುದ್ಧಕ್ಕೆ ಹೋಗಿಲ್ಲ. ಆದರೆ ಕೇವಲ ರಕ್ಷಣಾತ್ಮಕ ನೀತಿ ಅನುಸರಿಸಿದರೆ ಅದು ಒಂದು ರೀತಿಯಲ್ಲಿ ಸೋತಂತೆಯೇ ಎಂಬುದು ಇದುವರೆಗಿನ ಅನುಭವ. ಇಂತಹ ನೀತಿಯ ಅನುಸರಣೆಯಿಂದ ಭಾರತ ಕಳೆದುಕೊಂಡಿದ್ದೇ ಹೆಚ್ಚು. ಹಿಂದಿನ ಸರ್ಕಾರಗಳು ಸೇನೆಯ ಕೈಗಳನ್ನು ಕಟ್ಟಿಹಾಕಿದ್ದವು. ಒಂದು ಗುಂಡು ಹಾರಿಸಲೂ, ಪ್ರತೀಕಾರ ತೆಗೆದುಕೊಳ್ಳಲೂ ರಾಜಕಾರಣಿಗಳು ಬಿಡುತ್ತಿರಲಿಲ್ಲ. ಸೇನೆಗೆ  ಪ್ರತೀಕಾರ ತೆಗೆದುಕೊಳ್ಳಲು ಮುಕ್ತ ಹಸ್ತ ನೀಡಿದ್ದಿದ್ದರೆ ಸಮಸ್ಯೆ ತಾರ್ಕಿಕ ಅಂತ್ಯ ಕಂಡು ಬಹಳ ವರ್ಷಗಳಾಗಿರುತ್ತಿದ್ದವು. ಆದರೆ, ರಾಜಕೀಯ ಲಾಭವನ್ನು ಮಾತ್ರ ಗಮನದಲ್ಲಿರಿಸುವ ರಾಜಕಾರಣಿಗಳು ಕಾಶ್ಮೀರ ಸಮಸ್ಯೆಯನ್ನು ಇತ್ಯರ್ಥವಾಗದ ಹಂತಕ್ಕೆ ತಂದು ನಿಲ್ಲಿಸಿವೆ. ಪಾಕಿಸ್ತಾನ ತಾನು ಆಕ್ರಮಿಸಿದ ಕಾಶ್ಮೀರದ ಪ್ರಮುಖ ಭಾಗವನ್ನು ಚೀನಾಕ್ಕೆ ಧಾರೆಯೆರೆದಿದೆ. ತನ್ನ ವಶದಲ್ಲಿರುವ ಭಾಗವನ್ನು ಕಾಶ್ಮೀರದೊಳಗೆ ಉಗ್ರರನ್ನು ನುಸುಳಿಸಲು ಬಳಸುತ್ತಿದೆ. ಪಾಕ್ ಸೇನೆ ನುಸುಳುವಿಕೆಗೆ ಬೆಂಗಾವಲಾಗಿದೆ. ಇಂತಹ ಸ್ಥಿತಿಯಲ್ಲಿ ಕಾಶ್ಮೀರ ಕಣಿವೆಯಲ್ಲಿದ್ದ ಮೂಲ ನಿವಾಸಿಗಳನ್ನು ಹೊರದೂಡಿರುವ ನುಸುಳುಕೋರರು ತಮ್ಮ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಅಲ್ಲಿನ ಸರ್ಕಾರವೂ ಪಾಕಿಸ್ತಾನದ ಏಜೆಂಟರಂತೆ ವರ್ತಿಸುತ್ತಿದೆ. ಇಂತಹ ಸ್ಥಿತಿಯಲ್ಲಿ ಅತ್ಯಂತ ತಾಳ್ಮೆಯಿಂದ ದೇಶ ಕಾಯುವ ಕೆಲಸ ಮಾಡುತ್ತಿರುವ ಯೋಧರು ಜೀವವನ್ನು ಅಂಗೈಯಲ್ಲಿ ಹಿಡಿದು ಕರ್ತವ್ಯ ಮಾಡುತ್ತಿದ್ದಾರೆ. ಹೊರದೂಡಲ್ಪಟ್ಟಿರುವ ಕಾಶ್ಮೀರಿ ಪಂಡಿತರ ಪುನರ್ವಸತಿ ಆಗಬೇಕಿದೆ. ಇಂತಹ ಪರಿಸ್ಥಿತಿಯಲ್ಲಿ ಸೇನೆಯ ಸ್ಥೈರ್ಯವನ್ನು ಹೆಚ್ಚಿಸುವ ಕೆಲಸವಾಗಬೇಕಿದೆ ಮತ್ತು ಮಾನವ ಹಕ್ಕು ಉಲ್ಲಂಘನೆ, ಇತ್ಯಾದಿ ಮುಖವಾಡದ ಹಿನ್ನೆಲೆಯಲ್ಲಿ ಉಗ್ರರ ಮತ್ತು ನೆರೆರಾಷ್ಟ್ರದ ಪರವಾಗಿ ಪರೋಕ್ಷ ಬೆಂಬಲ ನೀಡುವ ಅನವಶ್ಯಕ ಮತ್ತು ಅನಪೇಕ್ಷಿತ ಹೇಳಿಕೆಗಳನ್ನು ಕೊಡುವ ಕಪಟಿಗಳನ್ನು ನಿಯಂತ್ರಿಸಬೇಕಿದೆ. ಪಾಕಿಸ್ತಾನ ನಿರಂತರವಾಗಿ ತನ್ನ ಚಟುವಟಿಕೆಗಳನ್ನು ನೇರ ಮತ್ತು ಪರೋಕ್ಷವಾಗಿ ಭಾರತದ ವಿರುದ್ಧ ನಡೆಸುತ್ತಲೇ ಇರುವಾಗ, ಶಾಂತಿಮಂತ್ರದ ಪಾಠ ಜಪಿಸಲು ಹೇಳುವ ಇಂತಹ ಕಪಟ ಮಾನವತಾವಾದಿಗಳು ಅಪಾಯಕಾರಿಗಳು ಎನ್ನಲೇಬೇಕಾಗುತ್ತದೆ. ಭಾರತಕ್ಕೆ ಹಾನಿಯಾದರೆ ಅದಕ್ಕೂ ಟೀಕಿಸುವುದು, ತಿರುಗಿಬಿದ್ದರೆ ಮಾನವ ಹಕ್ಕು ಉಲ್ಲಂಘನೆ ಅನ್ನುವುದು ಅವರ ನೀತಿಯಾಗಿದೆ.
     ಶಾಂತಿ ನಮ್ಮ ಮಂತ್ರವಾಗಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಅದು ಒಮ್ಮುಖವಾದರೆ ಪ್ರಯೋಜನವಿಲ್ಲ. ನಾವಾಗಿ ಆಕ್ರಮಣ ಮಾಡಬೇಕಿಲ್ಲ. ಆದರೆ ಏಟಿಗೆ ಪ್ರತಿ ಏಟು ಎಂಬುದು ನೀತಿಯಾಗಲೇಬೇಕು. ಹಾಗಾದರೆ ಮಾತ್ರ ಪರಿಸ್ಥಿತಿ ನಿಯಂತ್ರಣಕ್ಕೆ ಬಂದೀತು. ಸಮಸ್ಯೆ ಇತ್ಯರ್ಥಕ್ಕೆ ದಾರಿಗಳು ಕಂಡಾವು. ಭಯೋತ್ಪಾದಕರಿಗೆ ನಮ್ಮ ದೇಶದೊಳಗಿನವರೇ ಬೆಂಬಲ ಕೊಡುತ್ತಿರುವುದು ಈಗ ಮುಚ್ಚುಮರೆಯಾಗಿ ಉಳಿದಿಲ್ಲ. ಅಂತಹ ಸಹಕಾರ ಕೊಡುವ ಜನರನ್ನು ಗುರುತಿಸಿ ನಿಯಂತ್ರಿಸಲೇಬೇಕು. ರಾಜಕೀಯದ ಕಾರಣಕ್ಕಾಗಿ ಮತ್ತು ಮತಗಳಿಕೆಯ ಸಲುವಾಗಿ ಇದನ್ನು ನಿರ್ಲಕ್ಷಿಸಿದ್ದೇ ಆದರೆ ಗಂಡಾಂತರ ತಪ್ಪಿದ್ದಲ್ಲ. ದೇಶ ಹಲವಾರು ಸಮಸ್ಯೆಗಳಿಂದ ಬಳಲಿ ಬೆಂಡಾಗಿರುವಾಗ, ದೇಶದ ಬೆಂಗಾವಲಿಗಿರುವ ಸೇನೆಯ ನೈತಿಕ ಸ್ಥೈರ್ಯ ಕುಸಿಯದಂತೆ ನೋಡಿಕೊಳ್ಳಬೇಕಾಗಿರುವುದು ನಾಗರಿಕರೆನ್ನಿಸಿಕೊಂಡವರೆಲ್ಲರ ಕರ್ತವ್ಯವಾಗಿದೆ. ಇಂದಿನ ಸಂದಿಗ್ಧ ಸ್ಥಿತಿಯಲ್ಲಿ ನಾವು ಸಜ್ಜನ ಸುಬ್ಬಣ್ಣರಾದರೆ ಪ್ರಯೋಜನವಿಲ್ಲ. ನಮಗೆ ಹೋರಾಡಲು, ಪ್ರತಿಭಟಿಸಲು ಶಕ್ತಿಯಿಲ್ಲದಿರಬಹುದು. ಆದರೆ ಅನ್ಯಾಯದ ವಿರುದ್ಧ ಧ್ವನಿಯೆತ್ತುವವರಿಗೆ ಬೆಂಬಲವಾಗಿ ಇರಲಾದರೂ ಸಾಧ್ಯವಿದೆಯಲ್ಲವೇ? ಅಂತಹವರ ಪರವಾಗಿ ನಿಲ್ಲುವವರ ಸಂಖ್ಯೆ ಹೆಚ್ಚಾಗಿದ್ದರೂ ತೋರ್ಪಡಿಸಿಕೊಳ್ಳಲು ಸಜ್ಜನಿಕೆ, ಹಿಂಜರಿಕೆ, ಭಯ ಅವರನ್ನು ತಡೆಯುತ್ತಿರಬಹುದು. ಇದನ್ನು ಮೆಟ್ಟಿ ನಿಂತರೆ, ಈಗ ಕ್ಷೀಣವಾಗಿ ಕೇಳಿಬರುತ್ತಿರುವ ಧ್ವನಿ ಮುಂದೊಮ್ಮೆ ಶತ್ರುವನ್ನು ನಡುಗಿಸುವ ಸಿಂಹಘರ್ಜನೆಯಾಗುತ್ತದೆ. ಸಜ್ಜನ ಶಕ್ತಿ ಮತ್ತು ಕ್ಷಾತ್ರ ಶಕ್ತಿ ಒಟ್ಟುಗೂಡಿದರೆ ದುಷ್ಟಶಕ್ತಿಗಳ ಆಟ ನಡೆಯುವುದಿಲ್ಲ.
-ಕ.ವೆಂ.ನಾಗರಾಜ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ